ವೇಣೂರು: ದಾನಕ್ಕೆ ಮಹಾನ್ ಪ್ರೇರಣಾಶಕ್ತಿಯಾಗಬಲ್ಲ ಮಹಾಮಸ್ತಕಾಭಿಷೇಕವು ವೇಣೂರು ಶ್ರೀ ಭಗವಾನ್ ಬಾಹುಬಲಿಗೆ 12 ವರ್ಷಗಳ ಬಳಿಕ ಇದೀಗ 2024ರ ಫೆ. 22ರಿಂದ ಮಾ.1ರವರೆಗೆ ಅಖಿಲ ಕರ್ನಾಟಕ ಮಟ್ಟದಲ್ಲಿ ಜರಗಲಿದೆ ಎಂದು ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಅಧ್ಯಕ್ಷರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು.
ಅವರು ಇಂದು ವೇಣೂರು ಶ್ರೀ ಬಾಹುಬಲಿ ಸಭಾಭವನದಲ್ಲಿ ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕದ ಪ್ರಯುಕ್ತ ಜರಗಿದ ಪತ್ರಿಕಾಗೋಷ್ಠಿ ಹಾಗೂ ಶ್ರಾವಕರ ಸಮಾಲೋಚಣಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ಆಯುಷ್ಯದಲ್ಲಿ ಮತ್ತೊಂದು ವೇಣೂರು ಮಹಾಮಸ್ತಕಾಭಿಷೇಕ ನೆರವೇರಿಸುವ ಅವಕಾಶ ಬಂದಿದೆ. ಯುವ ಸಮುದಾಯಕ್ಕೆ ಆಸಕ್ತಿ, ಕುತೂಹಲ ಮತ್ತು ಸಂತೋಷ ಆಗುವ ರೀತಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಿದ್ದೇವೆ. ಲೌಖಿಕವಾಗಿ ಕಾರ್ಯಕ್ರಮದ ಯಶಸ್ವಿ ಮಾಡುವುದರ ಮೂಲಕ ಧರ್ಮ ಪ್ರಚಾರ ಆಗಲಿ. ಎಲ್ಲರು ಸೇರಿ ಯಶಸ್ವಿಮಾಡೋಣ, ಜನಹಿತ ಆಗುವ ಅನೇಕ ಕಾರ್ಯಕ್ರಮಗಳು ಮಹಾಮಸ್ತಕಾಭಿಷೇಕದಲ್ಲಿ ನಡೆಯಲಿದೆ. ಆ ಮೂಲಕ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡೋಣ ಎಂದರು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು ಮಾತನಾಡಿ, ಪ್ರತಿಯೊಂದು ಕೆಲಸದಲ್ಲಿ ಮಾರ್ಗದರ್ಶನ ಮಾಡುತ್ತಾ ಸಹಕಾರ ನೀಡುತ್ತಿರುವ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲೇ 2024ರ ಮಹಾಮಸ್ತಕಾಭಿಷೇಕ ಜರಗುವ ಬಗ್ಗೆ ಸಮಿತಿಯವರು ತೀರ್ಮಾನ ಮಾಡಿದ್ದೇವೆ. ಕಳೆದೆರಡು ಮಹಾಮಸ್ತಕಾಭಿಷೇಕಕ್ಕೂ ಅವಿಭಜಿತ ದ.ಕ. ಜಿಲ್ಲೆಯ ಜನರ ಸಹಕಾರ ಬಹಳಷ್ಟು ಲಭಿಸಿದೆ. ಪ್ರಧಾನ ಕಾರ್ಯದರ್ಶಿ ವಿ. ಪ್ರವೀಣ್ ಕುಮಾರ್ ಇಂದ್ರ ವಹಿಸಲಿದ್ದು, 26 ಉಪಸಮಿತಿಗಳ ರಚನೆ ಮಾಡಲು ತೀರ್ಮಾನಿಸಿದ್ದೇವೆ ಎಂದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ಸರಕಾರದ ಮಟ್ಟದಲ್ಲಿ ಗರಿಷ್ಠ ಸಹಕಾರ ನೀಡುವಲ್ಲಿ ಶ್ರಮವಹಿಸುತ್ತೇನೆ ಎಂದರು.
ನ್ಯಾಯವಾದಿ ಎಂ.ಕೆ. ವಿಜಯಕುಮಾರ್ ಮಾತನಾಡಿ, ಕರ್ನಾಟಕದ ಚರಿತ್ರೆಯಲ್ಲಿ ಜೈನ ಧರ್ಮೀಯರ ಸಾಧನೆ ಮತ್ತು ಕೊಡುಗೆ ಅಪಾರವಿದೆ. ಜೈನ ಸಮುದಾಯದ ರಾಜರುಗಳ ಆಳ್ವಿಕೆ, ರಾಜ್ಯಕ್ಕೆ ಅವರ ಕೊಡುಗೆ ಅಪಾರವಿದ್ದು, ಸುಂದರವಾದ ಮಹಾಮಸ್ತಕಾಭಿಷೇಕದ ಮೂಲಕ ಜೈನರ ಸಂಪ್ರದಾಯವನ್ನು ಇಡೀ ಸಮಾಜ, ಪ್ರಪಂಚಕ್ಕೆ ತಿಳಿಯಪಡಿಸುವಂತಾಗಬೇಕು ಎಂದರು.
ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿ-2024
ಅಧ್ಯಕ್ಷರಾಗಿ ಧರ್ಮಸ್ಥಳದ ಡಾ| ವೀರೇಂದ್ರ ಹೆಗ್ಗಡೆ, ಕಾರ್ಯಾಧ್ಯಕ್ಷರಾಗಿ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲ, ಪ್ರಧಾನ ಕಾರ್ಯದರ್ಶಿಯಾಗಿ ವಿ. ಪ್ರವೀಣ್ಕುಮಾರ್ ಇಂದ್ರ ಹಾಗೂ ಕೋಶಾಧಿಕಾರಿಯಾಗಿ ಪಿ. ಜಯರಾಜ್ ಕಂಬ್ಳಿ ಅವರನ್ನು ಇಂದು ಆಯ್ಕೆಸರ್ವಾನುಮತದಿಂದ ಮಾಡಲಾಗಿದ್ದು, ಹಾಗೂ ಸಮಿತಿಗಳನ್ನು ರಚಿಸಲಾಗಿದೆ.
ಈ ಬಾರಿ ಹೆಚ್ಚಿನ ಜನರು ವೀಕ್ಷಿಸಿಲು ಅನುಕೂಲವಾಗುವಂತೆ ಗ್ಯಾಲರಿ ನಿರ್ಮಾಣ ಆಗಲಿ ಎಂದು ಜಿನರಾಜ ಜೈನ್ ಸಭೆಯಿಂದ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದ ವೇಳೆ ಹಾಗೂ ಬೆಟ್ಟದ ಸುತ್ತಮುತ್ತ ಸುಡುಮದ್ದು ಮತ್ತು ಇನ್ನಿತ್ತರ ಪ್ಲೆಕ್ಸ್, ಬ್ಯಾನರ್ ಅಳವಡಿಸಲು ನಿಷೇಧ ಹೇರಬೇಕೆಂದು ಯಂ. ವಿಜಯರಾಜ ಅಧಿಕಾರಿ ಸಲಹೆ ಇತ್ತರು. ಬಿ. ಸುಧೀರ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿ 12 ವರ್ಷಕ್ಕೊಮ್ಮೆ ನಡೆಯುವ ಈ ಬಾರಿಯ ಮಸ್ತಕಾಭಿಷೇಕಕ್ಕೆ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸುವಂತೆ ಅಭಿಪ್ರಾಯ ತಿಳಿಸಿದರು. ಇನ್ನಿತ್ತರ ಶ್ರಾವಕರು ಹಲವಾರು ಸಲಹೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಪ್ರಮುಖರಾದ ಎಸ್.ಜಿ. ಸಂಪತ್ ಸಾಮ್ರಾಜ್ಯ, ಪದ್ಮಶೇಖರ ಜೈನ್, ಎನ್. ಪೂರಣ್ವರ್ಮ, ಪ್ರೊ| ಸತೀಶ್ಚಂದ್ರ, ಭಜಬಲಿ ಧರ್ಮಸ್ಥಳ, ಪ್ರೇಮ್ಕುಮಾರ್, ಶುಭಾಷ್ಚಂದ್ರ ಚೌಟ, ಕೆ. ಹೇಮರಾಜ್ ಬೆಳ್ಳಿಬೀಡು, ಸುದರ್ಶನ್ ಜೈನ್ ಪಂಜಿಕಲ್ಲು, ಎ. ಜೀವಂಧರ ಕುಮಾರ್ ಪಡ್ಯೋಡಿಗುತ್ತು, ಶಿವಪ್ರಸಾದ್ ಅಜಿಲ ಅಳದಂಗಡಿ, ಜಯರಾಜ್ ಹೆಗ್ಡೆ ಪುತ್ತಿಲ, ದಿನೇಶ್ ಆನಡ್ಕ, ಆದರ್ಶ ಎಂ., ಪಿ. ಜಯರಾಜ್ ಕಂಬ್ಳಿ, ಡಾ| ಸುದರ್ಶನ್ ಕುಮಾರ್, ಡಾ| ಮಹಾವೀರ ಜೈನ್, ವಿ. ಸೋಮಶೇಖರ ಶೆಟ್ಟಿ, ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ, ಬಾಹುಬಲಿ ಯುವಜನ ಸಂಘ, ಜೈನ್ ಮಿಲನ್ ಹಾಗೂ ಬ್ರಾಹ್ಮೀ ಮಹಿಳಾ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಸರ್ವೇಶ್ ಜೈನ್ ಪ್ರಾರ್ಥಿಸಿ, ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ವಿ. ಪ್ರವೀಣ್ಕುಮಾರ್ ಇಂದ್ರ ಸ್ವಾಗತಿಸಿ, ಜತೆ ಕಾರ್ಯದರ್ಶಿ, ಉಪನ್ಯಾಸಕರಾದ ಮಹಾವೀರ ಜೈನ್ ಮೂಡುಕೋಡಿಗುತ್ತು ನಿರೂಪಿಸಿ, ವಂದಿಸಿದರು.