ಪಲಕ್ಕಾಡ್: ನಾಯಿ ಕಚ್ಚಿ ರೇಬೀಸ್ ಕಾಯಿಲೆಯಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಸಾವಿಗೀಡಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.
ಶ್ರೀಲಕ್ಷ್ಮೀ (19) ಮೃತ ವಿದ್ಯಾರ್ಥಿನಿ. ಈಕೆ ಪಲಕ್ಕಾಡ್ ಮೂಲದ ಸುಗುನನ್ ಮತ್ತು ಸಿಂಧು ದಂಪತಿಯ ಪುತ್ರಿ.
ಮೇ 30ರ ಬೆಳಗ್ಗೆ ಶ್ರೀಲಕ್ಷ್ಮೀ ಅವರು ಕಾಲೇಜಿಗೆ ಹೋಗುತ್ತಿದ್ದಾಗ ಅವರ ಪಕ್ಕದ ಮನೆಯ ನಾಯಿ ಆಕೆಗೆ ಕಚ್ಚಿತ್ತು. ಆ ನಂತರ ಯುವತಿ ಆರೋಗ್ಯ ಇಲಾಖೆ ಸೂಚನೆಯಂತೆ ಲಸಿಕೆಯನ್ನೂ ಹಾಕಿಸಿಕೊಂಡರು. ಅದಾದ ಕೆಲವು ದಿನಗಳಿಂದ ಯಾವುದೇ ಲಕ್ಷಣಗಳು ಕಂಡುಬಂದಿರಲಿಲ್ಲ. ಇತ್ತೀಚೆಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶ್ರೀಲಕ್ಷ್ಮೀ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಈ ವೇಳೆ ಪರೀಕ್ಷಿಸಿದಾಗ ರೇಬೀಸ್ ಕಾಯಿಲೆಯ ಲಕ್ಷಣಗಳಿರುವುದು ಕಂಡುಬಂದಿತ್ತು. ಕಳೆದ ಎರಡು ದಿನಗಳ ಹಿಂದೆಯಷ್ಟೇ ಲಕ್ಷಣಗಳು ಹೆಚ್ಚಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಕ್ಷಣ ಆಕೆಯನ್ನು ತ್ರಿಸ್ಸೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು (ಜುಲೈ 1) ಬೆಳಗ್ಗೆ ಕೊನೆಯುಸಿರೆಳೆದಿದ್ದಾಳೆ?
ಶ್ರೀಲಕ್ಷ್ಮೀ ಕೊಯಮತ್ತೂರಿನಲ್ಲಿ ಮೊದಲ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದರು. ಈಕೆಗೆ ಸನತ್ ಮತ್ತು ಸಿದ್ಧಾರ್ಥನ್ ಹೆಸರಿನ ಇಬ್ಬರು ಸಹೋದರರಿದ್ದಾರೆ. ಕುಟುಂಬಕ್ಕೆ ಒಬ್ಬಳೇ ಹೆಣ್ಣು ಮಗಳಾಗಿದ್ದಳು ಎಂದು ಕುಟುಂಬದ ಮೂಲಗಳು ತಿಳಿಸಿವೆ.