ಬೆಂಗಳೂರು: 21 ವರ್ಷದೊಳಗಿನ ‘ಅಪ್ರಾಪ್ತ’ರಿಗೆ ಬಾರ್-ಪಬ್ ಪ್ರವೇಶ ನಿಷೇಧಿಸುವಂತೆ ಎಡಿಜಿಪಿ ಅಲೋಕ್ ಕುಮಾರ್ ಖಡಕ್ ಸೂಚನೆ ಹೊರಡಿಸಿದ್ದಾರೆ.
ಹೌದು.. ರಾಜ್ಯದಲ್ಲಿ ಪಬ್ , ಬಾರ್ ಮತ್ತು ಮದ್ಯದಂಗಡಿಗಳಿಗೆ ಎಡಿಜಿಪಿ ಅಲೋಕ್ ಕುಮಾರ್ ಖಡಕ್ ಆದೇಶವನ್ನು ಹೊರಡಿಸಿದ್ದು, ಪಬ್, ಬಾರ್, ಮತ್ತು ಮದ್ಯದಂಗಡಿಗಳು ನಿಗಧಿತ ಸಮಯದಲ್ಲಿ ಬಂದ್ ಮಾಡುವ ಜೊತೆಗೆ ಕಲವು ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಚನೆಯನ್ನು ನೀಡಲಾಗಿದೆ.
ಅಪ್ರಾಪ್ತ ವಯಸ್ಕರು ಬಾರ್ ಅಥವಾ ಪಬ್ಗಳಿಗೆ ಪ್ರವೇಶಿಸುವುದನ್ನು ತಡೆಯಲು ಎಡಿಜಿಪಿ ಅಲೋಕ್ ಕುಮಾರ್ ಕಠಿಣ ಕ್ರಮ ಕೈಗೊಂಡಿದ್ದು, ಪಬ್ಗಳು, ಬಾರ್ಗಳಲ್ಲಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಪ್ರವೇಶ ನಿಷೇಧಿಸುವಂತೆ ತಮ್ಮ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.
ಬಾರ್ ಮತ್ತು ಪಬ್ ಸೇರಿದಂತೆ ಮದ್ಯದಂಗಡಿಗಳಿದೆ ಮೀಸೆ ಚಿಗುರದ ಅಪ್ರಾಪ್ತರು ಹೋಗುತ್ತಿರುವುದು ಬೆಳಕಿಗೆ ಬಂದಿದ್ದು, ಈ ಹಿಂದೆ ಮಂಗಳೂರಿನ ಪಬ್ನಲ್ಲಿ ಎಂಟು ಹುಡುಗರು ಮತ್ತು ಹುಡುಗಿಯರು 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ಕಂಡುಬಂದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಅಪ್ರಾಪ್ತ ವಯಸ್ಸಿನ ಮಕ್ಕಳು ಮದ್ಯ ಸೇವನೆ ಮಾಡುವುದು ಕಾನೂನಿಗೆ ಸುವ್ಯವಸ್ಥೆಗೆ ದಕ್ಕೆಯಾಗುವ ಸಾಧ್ಯತೆಗಳಿವೆ. ಇದರಿಂದಾಗಿ ಮಕ್ಕಳನ್ನು ಬಾರ್ ನಲ್ಲಿ ಕೆಲಸಕ್ಕೆ ಬಳಸಿಕೊಳ್ಳುವುದಾಗಲಿ, ಮಕ್ಕಳಿಗೆ ಮದ್ಯವನ್ನು ನೀಡುವುದಾಗಲಿ ಮಾಡುವಂತಿಲ್ಲ ಎಂಬ ನಿಯಮವೂ ಇದೆ. ಆದರೂ ಅಪ್ರಾಪ್ತರು ಬಾರ್ ನಲ್ಲಿ ಮದ್ಯವನ್ನು ಖರೀದಿಸುತ್ತಿದ್ದಾರೆ. ಇದಕ್ಕಾಗಿ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಖಡಕ್ ಆದೇಶವನ್ನು ಮಾಡಿದ್ದಾರೆ.