ಉಳ್ಳಾಲ: ತೆಂಗಿನ ಕಾಯಿ ಕೀಳಲು ಮರವೇರಿದ್ದ ವೇಳೆ ಕಣಜದ ಹುಳುಗಳು ದಾಳಿ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು ,ಮತ್ತೋರ್ವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉಳ್ಳಾಲ ಬೈಲು ನಿವಾಸಿ ಜಿತನ್ ರೆಸ್ಕಿನ(38)ಮೃತ ದುರ್ದೈವಿ.ಜಿತನ್ ಅವರು ಮಂಗಳವಾರ ಬೆಳಿಗ್ಗೆ ಉಳ್ಳಾಲ ಬೈಲಿನ ಭವಾನಿ ಎಂಬವರ ಮನೆಯಲ್ಲಿ ತೆಂಗಿನ ಕಾಯಿ ಕೀಳುತ್ತಿದ್ದ ವೇಳೆ ಮರದಲ್ಲಿ ಗೂಡು ಕಟ್ಟಿದ್ದ ನೂರಕ್ಕೂ ಅಧಿಕ ಕಣಜದ ಹುಳುಗಳು ದಾಳಿ ನಡೆಸಿ ಗಾಯಗೊಳಿಸಿದ್ದವು.ಇಷ್ಟಲ್ಲದೆ ರಸ್ತೆಯಲ್ಲಿ ಶಾಲಾ ವಾಹನದ ಕಡೆ ತೆರಳುತ್ತಿದ್ದ ಪ್ರವೀಣ್ ಪೂಜಾರಿ ಮತ್ತು ಅವರ ಮಗಳು ಧೃತಿ(7)ಗೂ ನೊಣಗಳು ಕಚ್ಚಿ ಗಾಯಗೊಳಿಸಿದ್ದವು. ಜಿತನ್ ಅವರನ್ನ ಮಂಗಳೂರಿನ ಫಾಧರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಂಜೆ ಸಾವನ್ನಪ್ಪಿದ್ದಾರೆ.
ಪ್ರವೀಣ್ ಮತ್ತು ಅವರ ಮಗಳು ಧೃತಿಗೂ ನೊಣಗಳು ಗಾಯಗೊಳಿಸಿದ್ದು ಇಬ್ಬರೂ ತೊಕ್ಕೊಟ್ಟಿನ ಸಹರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದ್ದರು.ಸಂಜೆ ಆಗುತ್ತಿದ್ದಂತೆ ತಲೆಗೆ ನೊಣಗಳಿಂದ ಕಡಿಸಿಕೊಂಡಿದ್ದ ಪ್ರವೀಣ್ ಅವರೂ ವಾಂತಿ ಮಾಡಲು ಆರಂಭಿಸಿದ್ದು ಗಂಭೀರಗೊಂಡ ಅವರನ್ನೂ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ತೀವ್ರ ನಿಘಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ಜಿತನ್ ಅವರಿಗೆ ಎರಡು ಗಂಡು ಮಕ್ಕಳಿದ್ದು ಅವರ ಪತ್ನಿ ರೋಹಿತ ಸದ್ಯ 6 ತಿಂಗಳ ಗರ್ಭಿಣಿಯಾಗಿದ್ದಾರೆ.ಗಂಡನ ಸಾವಿನ ಸುದ್ದಿ ಕೇಳಿ ರೋಹಿತ ಆಘಾತಕ್ಕೊಳಗಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಚೇತರಿಸಿದ್ದಾರೆ.ಉಳ್ಳಾಲ ಬೈಲಿನ ಸಣ್ಣ ಬಾಡಿಗೆ ಮನೆಯಲ್ಲಿ ವಾಸವಿದ್ದ ಬಡ ಕುಟುಂಬಕ್ಕೆ ಜಿತನ್ ಅವರೇ ಆಧಾರ ಸ್ತಂಭವಾಗಿದ್ದರು.