ಮಂಗಳೂರು: ಮಂಗಳೂರಿನ ಸುರತ್ಕಲ್ನಲ್ಲಿ ಯುವಕ ಮಹಮ್ಮದ್ ಫಾಜಿಲ್ ಮಂಗಲಪೇಟೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ.
ಫಾಜಿಲ್ ಹತ್ಯೆ ಹಿಂದೆ ಸುಹಾಸ್ ಶೆಟ್ಟಿ ಗ್ಯಾಂಗ್ ಕೈವಾಡ ಇದೆಯೆಂದು ಸೋಮವಾರ ಹಿರಿಯ ಪೊಲೀಸ್ ಅಧಿಕಾರಿಗಳು ಶಂಕಿಸಿದ್ದರು. ಇದಕ್ಕೆ ಪೂರಕವೆಂಬಂತೆ ಈಗ ಬಂಧಿತ ಆರು ಮಂದಿಯೂ ಸುಹಾಸ್ ಶೆಟ್ಟಿ ಗ್ಯಾಂಗ್ಗೆ ಸೇರಿದವರಾಗಿದ್ದಾರೆ.
ಬಂಧಿತ ಆರೋಪಿಗಳ ಮೇಲೆ ಈ ಹಿಂದೆಯೂ ಅಪರಾಧ ಪ್ರಕರಣಗಳು ದಾಖಲಾಗಿವೆ. ಆರೋಪಿಗಳನ್ನು ಸುರತ್ಕಲ್ ಠಾಣೆಗೆ ಕರೆದೊಯ್ಯಲಾಗಿದೆ. ಕೊಲೆಯ ಉದ್ದೇಶವನ್ನು ತಿಳಿದುಕೊಳ್ಳಲು ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ಭಾನುವಾರವಷ್ಟೇ ಮಹಮ್ಮದ್ ಫಾಜಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಂಧನವಾಗಿತ್ತು. ಆರೋಪಿ ಅಜಿತ್ ಕ್ರಾಸ್ತ ಎಂಬುವವನನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗಳು ಹತ್ಯೆ ಮಾಡಲು ಅಜಿತ್ ಕಾರಿನಲ್ಲಿ ಆಗಮಿಸಿದ್ದರು ಎಂಬುದು ಸದ್ಯದ ಮಾಹಿತಿ.
ಬಂಧಿತ ಅಜಿತ್ ಕ್ರಾಸ್ತ ನೀಡಿದ ಸುಳಿವಿನ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಫಾಜಿಲ್ ಹತ್ಯೆಗೆ ಬಿಳಿ ಹುಂಡೈ ಕಾರನ್ನು ಬಳಸಲಾಗಿತ್ತು. ಫಾಜಿಲ್ ಹತ್ಯೆಗೆ ಬಳಸಿದ್ದ ಕಾರು ಸಂಚಾರ ನಡೆಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆರೋಪಿ ಅಜಿತ್ ಕ್ರಾಸ್ತಾ ಈ ಹುಂಡೈ ಕಾರಿನ ಮಾಲೀಕರು.
ಫಾಜಿಲ್ ಹತ್ಯೆಯ ತನಿಖೆಯನ್ನು ಮಂಗಳೂರು ಪೊಲೀಸ್ ಕಮಿಷನರೇಟ್ನ ಎಸಿಪಿ ಮಹೇಶ್ ಕುಮಾರ್ ನಡೆಸುತ್ತಿದ್ದಾರೆ.