ಬಂಟ್ವಾಳ: ಗ್ರಾಮ ಪಂಚಾಯತ್ವೊಂದರ ತ್ಯಾಜ್ಯವನ್ನು ಇನ್ನೊಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಡಂಪ್ ಮಾಡಿ ಪರಾರಿಯಾದ ಗುತ್ತಿಗೆದಾರನಿಂದಲೇ ತ್ಯಾಜ್ಯ ವಾಪಾಸು ತೆಗೆಸಿದ ಪಿಡಿಒ ದಂಡ ವಿಧಿಸಿದ ಘಟನೆ ದ.ಕ ಜಿಲ್ಲೆಯ ಬಂಟ್ವಾಳದ ಅಮ್ಟಾಡಿ ಗ್ರಾ.ಪಂ. ವ್ಯಾಪ್ತಿಯ ಕುರಿಯಾಳ ಪಡು ಎಂಬಲ್ಲಿ ನಡೆದಿದೆ.
ನಿನ್ನೆ ರಾತ್ರಿ ಅಮ್ಟಾಡಿ ಗ್ರಾ.ಪಂ. ವ್ಯಾಪ್ತಿಯ ಕುರಿಯಾಳ ಪಡು ರಸ್ತೆ ಬದಿಯಲ್ಲಿ ರಾಶಿ ಗಟ್ಟಲೆ ಕಸವನ್ನು ವಾಹನದಲ್ಲಿ ಬಂದು ಎಸೆದು ಹೋದ ಬಗ್ಗೆ ಗ್ರಾ.ಪಂ.ಗೆ ಸ್ಥಳೀಯರು ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಮಾಹಿತಿ ಕಲೆಹಾಕಲು ಗ್ರಾ.ಪಂ.ಪಿ.ಡಿ.ಒ.ರವಿ ಮುಂದಾದರು. ಈ ವೇಳೆ ಯಾವುದೇ ಸುಳಿವು ಸಿಗದೇ ಇದ್ದಾಗ ಗ್ರಾ.ಪಂ.ನ ಬಿಲ್ ಕಲೆಕ್ಟರ್ ಚೇತನ್ ಎಂಬವರು ತ್ಯಾಜ್ಯ ದಲ್ಲಿ ಯಾವುದಾದರೂ ಸುಳಿವು ಸಿಗಬಹುದು ಎಂದು ಹುಡುಕಾಟ ನಡೆಸಿದ್ದಾರೆ. ಹೀಗೆ ಹುಡುಕಾಡಿದಾಗ ಪರಂಗಿಪೇಟೆ ಬಾರ್ ಒಂದರ ಬಿಲ್ ಪತ್ತೆಯಾಗಿತ್ತು. ಅ ಬಿಲ್ ಆಧಾರದ ಮೇಲೆ ಮಾಹಿತಿ ಕಲೆ ಹಾಕಿದಾಗ ಅದು ಪುದು ಗ್ರಾ.ಪಂ.ನ ತ್ಯಾಜ್ಯ ಎಂದು ಖಾತ್ರಿ ಯಾಯಿತು.
ಬಳಿಕ ಪುದು ಗ್ರಾಮಪಂಚಾಯತ್ ಅನ್ನು ಸಂಪರ್ಕ ಮಾಡಿ ವಿಚಾರ ತಿಳಿಸಿದಾಗ ಅವರು ಅಲ್ಲಿನ ತ್ಯಾಜ್ಯ ವಿಲೇವಾರಿಯನ್ನು ಸ್ಥಳೀಯ ವ್ಯಕ್ತಿಯೋರ್ವನಿಗೆ ಗುತ್ತಿಗೆ ನೀಡಲಾಗಿದ್ದು, ಆತ ಕಸವನ್ನು ವಾಹನದ ಮೂಲಕ ಇಲ್ಲಿ ಡಂಪ್ ಮಾಡಿ ಹೋಗಿರುವ ಬಗ್ಗೆ ವಿಚಾರ ತಿಳಿದ ಬಳಿಕ ಗುತ್ತಿಗೆದಾರರನ್ನು ಕರೆಯಿಸಿ ಅತನಿಂದಲೇ ಕಸವನ್ನು ತೆಗೆಸಿದ ಪಿಡಿಒ ರವಿ. ಬಿ ಹಾಗೂ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ, ಆತನಿಗೆ 5000 ಸಾವಿರ ರೂ ದಂಡವನ್ನು ವಿಧಿಸಿದ್ದಾರೆ.
