ಕಾಪು: ದೀಪಾವಳಿ ಪ್ರಯುಕ್ತ ತುಡರ ಹಬ್ಬದ ಬೆಳಕು ಇಡಲು ಗದ್ದೆಗೆ ಹೋಗಿದ್ದ ಯುವಕನಿಗೆ ವಿಷಜಂತು ಕಚ್ಚಿ ಮೃತಪಟ್ಟ ಘಟನೆ ಕಾಪುವಿನಲ್ಲಿ ಶುಕ್ರವಾರ ನಡೆದಿದೆ. ಕಾಪು ಕಲ್ಯ ನಿವಾಸಿ ರೋಹಿತ್ ಕುಮಾರ್ (26) ಮೃತ ಯುವಕ.
ಗುರುವಾರ ರಾತ್ರಿ ಬಲೀಂದ್ರ ಪೂಜೆಯ ಪ್ರಯುಕ್ತ ಗದ್ದೆಗೆ ತೆರಳಿದ್ದ ರೋಹಿತ್ ಕುಮಾರ್ ಗೆ ವಿಷ ಜಂತು ಕಚ್ಚಿದ್ದು, ತತ್ ಕ್ಷಣ ಅವರನ್ನು ನಾಟಿ ವೈದ್ಯರ ಬಳಿಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು.
ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದ ಅವರು, ಶುಕ್ರವಾರ ಸಂಜೆ ತೀವ್ರ ಅಸ್ವಸ್ಥಗೊಂಡಿದ್ದು ತಕ್ಷಣ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.