ಸುಳ್ಯ: ಇಲ್ಲಿನ ಗಾಂಧಿನಗರದಲ್ಲಿರುವ ಮಲ್ನಾಡು ಕ್ಯಾಶ್ಯೂ ಫ್ಯಾಕ್ಟರಿಯ ಹಳೆ ಕಟ್ಟಡದ ಕಬ್ಬಿಣ ಸಾಮಗ್ರಿಗಳನ್ನು ತೆಗೆಯುತ್ತಿದ್ದ ವೇಳೆ ಗೋಡೆ ಮಗುಚಿ ಬಿದ್ದು, ಸುಳ್ಯದ ಎಪಿಎಂಸಿ ಬಳಿಯ ಗುಜಿರಿ ವ್ಯಾಪಾರಿಯೋರ್ವರು ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ಅಬ್ದುಲ್ ಖಾದರ್ (45) ಎಂದು ಗುರುತಿಸಲಾಗಿದೆ. ಅಬ್ದುಲ್ ಖಾದರ್ ಅವರು ಹಲವು ವರ್ಷಗಳಿಂದ ಸುಳ್ಯದಲ್ಲಿ ಹಳೆ ಕಟ್ಟಡದ ಕಬ್ಬಿಣ ಸಾಮಗ್ರಿಗಳನ್ನು ತೆಗೆಯುವ ವ್ಯಾಪಾರ ನಡೆಸುತ್ತಿದ್ದರು.
ಮಲ್ನಾಡು ಕ್ಯಾಶ್ಯೂ ಫ್ಯಾಕ್ಟರಿ ಕಳೆದ ವರ್ಷಗಳಿಂದ ವ್ಯವಹಾರ ಸ್ಥಗಿತಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ಖಾದರ್ ಹಳೆಯ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ಕೈಗೊಂಡಿದ್ದರು. ತಮ್ಮ ಕೆಲಸದಾಳುಗಳ ಜೊತೆ ಖಾದರ್ ಇಂದು ಬೆಳಗ್ಗೆ ಗೋಡೆಯ ಮೇಲ್ಭಾಗದಲ್ಲಿದ್ದ ಕಬ್ಬಿಣದ ಟ್ರಸ್ನ್ನು ಹಗ್ಗ ಹಾಕಿ ಎಳೆಯುತ್ತಿರುವಾಗ ಗೋಡೆ ಅಬ್ದುಲ್ ಖಾದರ್ ಅವರ ಮೈ ಮೇಲೆ ಬಿದ್ದಿದ್ದು, ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದುಬಂದಿದೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.