ಮಂಗಳೂರು: ಕಾಂಗ್ರೆಸ್ಸಿನ ಹಿಂದೂ ಮುಖಂಡರಿಗೆ ತಮ್ಮನ್ನು ಹಿಂದೂಗಳೆಂದು ಕರೆಸಿಕೊಳ್ಳಲು ನಾಚಿಕೆ ಆಗುತ್ತಿರುವುದು ಇಂದು ನಿನ್ನೆಯಿಂದಲ್ಲ.ಹಿಂದೂ ಶಬ್ದದ ಅರ್ಥ ಅಸಹ್ಯವಾಗಿದೆ ಎನ್ನುವ ಮೂಲಕ ಸತೀಶ್ ಜಾರಕಿಹೊಳಿ ಈಗ ಬಹಿರಂಗವಾಗಿ ಮನಸ್ಸಿನ ಭಾವನೆಗಳನ್ನು ಹೇಳಿ ಕಾಂಗ್ರೆಸ್ ಮನಸ್ಥಿತಿಯನ್ನು ಸಾಬೀತುಪಡಿಸಿದ್ದಾರೆ ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಸತೀಶ್ ಜಾರಕಿಹೊಳಿ ಅವರು ಹಿಂದೂ ಎಂಬ ಪದ ಅಶ್ಲೀಲ ಎನ್ನುವ ಮೂಲಕ ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ನೀತಿಯನ್ನು ಮತ್ತೆ ಅನಾವರಣಗೊಳಿಸಿದ್ದಾರೆ.ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ಸತೀಶ್ ಜಾರಕಿಹೊಳಿ ಅವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಬೇಕು.ಈ ರೀತಿಯಾಗಿ ಹಿಂದೂಗಳನ್ನು ಟೀಕಿಸುವ ಮಾನಸಿಕತೆಯನ್ನು ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಬೆಳೆಸಿಕೊಂಡು ಬಂದಿದೆ. ಹಿಂದೂಗಳನ್ನು ಅವಮಾನಿಸುವುದು, ಕಡೆಗಣಿಸುವುದನ್ನು ಕಾಂಗ್ರೆಸ್ ಪಕ್ಷವು ಸಾಮಾನ್ಯ ಕಾರ್ಯಸೂಚಿಯಾಗಿ ಪಾಲಿಸುತ್ತಲೇ ಬಂದಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಹಿಂದೂ ಎಂಬುದು ಭಾರತದ ಜೀವನ ಪದ್ಧತಿ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಸತೀಶ್ ಜಾರಕಿಹೊಳಿ ಅವರು ಹಾಗಿದ್ದರೆ, ಸುಪ್ರೀಂಕೋರ್ಟಿಗಿಂತ ದೊಡ್ಡವರೇ ಎಂದು ಪ್ರಶ್ನಿಸಿದ್ದಾರೆ. ಬಾಬಾಸಾಹೇಬ ಡಾ. ಬಿ.ಆರ್.ಅಂಬೇಡ್ಕರ್ ಅವರು ಹಿಂದೂ ಧರ್ಮದ ಬಗ್ಗೆ ಇದೊಂದು ಜೀವನ ಪದ್ಧತಿ ಎಂದು ಹಲವೆಡೆ ಉಲ್ಲೇಖಿಸಿದ್ದಾರೆ ಎಂದು ನಳಿನ್ ಕುಮಾರ್ ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
©2021 Tulunada Surya | Developed by CuriousLabs