Saturday, April 20, 2024
spot_img
More

    Latest Posts

    ಮಂಗಳೂರು: ಮೃತನ ತಾಯಿಗೆ ಸಿಗಬೇಕಿದ್ದ 15 ಲಕ್ಷ ಇನ್ಸೂರೆನ್ಸ್ ಹಣ ವಂಚಿಸಿದ ವಕೀಲ

    ಮಂಗಳೂರು: ಅಪಘಾತದಲ್ಲಿ ಮಗನನ್ನು ಕಳೆದುಕೊಂಡ ಪೋಷಕರು ಇನ್ನೂ ಕಣ್ಣೀರು ಸುರಿಸುತ್ತಲೇ ಇದ್ದಾರೆ. ಆದರೆ, ಈ ಕುಟುಂಬಕ್ಕೆ ಸಂದಾಯವಾಗಬೇಕಾಗಿದ್ದ 15 ಲಕ್ಷ ರೂ. ಇನ್ಸೂರೆನ್ಸ್ ಹಣವನ್ನೇ ವಕೀಲನೊಬ್ಬ ಚಾಣಾಕ್ಷತನದಿಂದ ತನ್ನ ಜೇಬಿಗೆ ಹಾಕಿಕೊಂಡಿದ್ದಾನೆ!

    2019ರಲ್ಲಿ ಬಜಪೆಯ ಶರಣ್ ಬೆಂಗಳೂರಿನ ಪೀಣ್ಯದಲ್ಲಿ ತನ್ನ ಗೆಳೆಯನ ಜತೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅಪಘಾತವಾಗಿ ಮೃತಪಟ್ಟಿದ್ದರು. ಪರಿಹಾರಕ್ಕಾಗಿ ಪೋಷಕರು ಗ್ರಾಹಕರ ಕೋರ್ಟ್ ಮೊರೆ ಹೋಗಿದ್ದರು. ಸಂಬಂಧಿ ವಕೀಲನನ್ನು ನೇಮಿಸಿದ್ದರು. ಹಲವು ದಾಖಲೆಗಳ ಅವಶ್ಯಕತೆಯಿದೆ ಎಂದು ಆ ವಕೀಲ ಮೃತ ಶರಣ್ ಪೋಷಕರನ್ನು ನಂಬಿಸಿ ಹಲವಾರು ಬಿಳಿ ಪೇಪರ್ ಗಳ ಮೇಲೆ ಸಹಿ ತೆಗೆದುಕೊಂಡಿದ್ದ. ಆಧಾರ್, ಭಾವಚಿತ್ರ, ಪಾನ್‌ಕಾರ್ಡ್‌ ಪಡೆದು ಮೃತ ಯುವಕನ ತಾಯಿ ಶಕುಂತಳಾ ಹೆಸರಿನಲ್ಲಿ ಎಸ್‌ಬಿ ಖಾತೆ ತೆರೆದಿದ್ದ. ಈ ಪ್ರಕರಣ ಇತ್ಯರ್ಥವಾಗಿತ್ತು. 15 ಲಕ್ಷ ವಿಮೆ ಹಣ ಕಂಪನಿ ನೀಡಿತ್ತು.

    ವಕೀಲ ನ್ಯಾಯಾಲಯದಲ್ಲಿ ಮೃತ ಯುವಕನ ಪೋಷಕರಿಂದ ಸಹಿ ಮಾಡಿಸಿ, ಚೆಕ್‌ನಲ್ಲಿ ಅಕ್ಷರದೋಷವಿದೆ. ಅದನ್ನು ಇನ್ಸೂರೆನ್ಸ್ ಕಂಪನಿಯಲ್ಲಿ ಸರಿ ಮಾಡಿಸಲು ಹಿಂದೆ ಕಳುಹಿಸಬೇಕಾಗಿದೆ ಎಂದು ಸುಳ್ಳು ಹೇಳಿ ಚೆಕ್‌ ಇಟ್ಟುಕೊಂಡಿದ್ದ. 2021ರ ಸೆಪ್ಟೆಂಬರ್ 15ರಂದು ಶಕುಂತಳಾ ಅವರ ಪೋಸ್ಟ್‌ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಬಗ್ಗೆ ಸಂದೇಶ ಬಂತು. ಆದರೆ, ಪೋಸ್ಟ್ ಬ್ಯಾಂಕ್‌ನಲ್ಲಿ ಅವರು ಖಾತೆ ತೆರೆಯದ ಕಾರಣ ಇದೊಂದು ಫೇಕ್ ಮೆಸೇಜ್ ಎಂದು ಸುಮ್ಮನಾದರು.

    ಕೆಲ ದಿನಗಳ ಬಳಿಕ ಇದೇ ಖಾತೆಯಿಂದ 5 ಲಕ್ಷ ರೂ. ಮತ್ತು ಇನ್ನೊಮ್ಮೆ
    10 ಲಕ್ಷ ರೂ. ವರ್ಗಾವಣೆಯಾದ ಮೆಸೇಜ್ ಬಂದಿತ್ತು. ಇದರಿಂದ ಪೋಷಕರು ಆತಂಕಕ್ಕೊಳಗಾಗಿ ಪೋಸ್ಟ್ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಶಕುಂತಳಾ ಹೆಸರಿನಲ್ಲಿ ಮೋಸದಿಂದ ಖಾತೆ ತೆರೆದ ಬಗ್ಗೆ ಮತ್ತು 15 ಲಕ್ಷ ರೂ.ವನ್ನು ವಕೀಲ ತನ್ನ ಖಾತೆಗೆ ವರ್ಗಾಯಿಸಿರುವುದು ತಿಳಿದು ಬಂದಿದೆ. ಈ ಬಗ್ಗೆ ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss