ಮಂಗಳೂರು: 6 ವರ್ಷಗಳ ಹಿಂದೆ ಮಂಗಳೂರು ನಗರದಲ್ಲಿ ಮಹಿಳೆಯೊಬ್ಭರ ಕತ್ತಿನಿಂದ ಚಿನ್ನದ ಸರ ಕಸಿದ ಪ್ರಕರಣದ ಆರೋಪಿ ಮಹಮ್ಮದ್ ನಿಝಾರ್ (31) ಗೆ ಮಂಗಳೂರಿನ 2 ನೇ ಸಿಜೆಎಂ ನ್ಯಾಯಾಲಯವು 3 ವರ್ಷ 6 ತಿಂಗಳ ಜೈಲು ಶಿಕ್ಷೆ ಮತ್ತು 10,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಪುನಃ 2 ತಿಂಗಳ ಸಾಮಾನ್ಯ ಸಜೆಯನ್ನು ಅನುಭವಿಸಬೇಕೆಂದು ತೀರ್ಪು ನೀಡಿದೆ.
2016 ಆಕ್ಟೋಬರ್ 16 ರಂದು ಮಂಗಳೂರಿನ ಕದ್ರಿ ಕಂಬಳ ನಿವಾಸಿ ಅನುರಾಧಾ ಎಸ್. ರಾವ್ ಅವರು ಬೆಳಗ್ಗೆ ವಾಕಿಂಗ್ ಹೋಗಿ ಕಾಸ್ಮೋಸ್ ಲೇನ್ ಬಳಿ ತಲುಪಿದಾಗ ಸ್ಕೂಟರ್ ನಲ್ಲಿ ಬಂದ ಅಪರಿಚಿತ ವ್ಯಕ್ತಿ ಆಕೆಯ ಕುತ್ತಿಗೆಯಿಂದ 35,000 ರೂ. ಬೆಲೆಯ 10.61 ಗ್ರಾ ತೂಕದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದನು. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಅರೋಪಿ ಸುಳ್ಯದ ಜಟ್ಟಿಪಳ್ಳದ ಕಾನತ್ತಿಲ ಕ್ರಾಸ್ ನಿವಾಸಿ ಮಹಮ್ಮದ್ ನಿಝಾರ್ ಮತ್ತು ಆತನಿಗೆ ಸ್ಕೂಟರ್ನಲ್ಲಿ ಪರಾರಿಯಾಗಲು ಸಹಕರಿಸಿದ ಆರೋಪಿ ಜುರೈಸ್ ಕೆ.ಎಂ. ನನ್ನು ಬಂಧಿಸಿದ್ದರು. ಕದ್ದ ಚಿನ್ನದ ಸರವನ್ನು ಬೆಳ್ಳಾರೆಯ ಜ್ಯುವೆಲ್ಲರಿ ಅಂಗಡಿಯೊಂದರಿಂದ ವಶಕ್ಕೆ ಪಡೆದಿದ್ದರು. ಕದ್ರಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮಾರುತಿ ಜಿ. ನಾಯಕ ಅವರು ತನಿಖೆಯನ್ನು ಪೂರ್ಣಗೊಳಿಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 2 ನೇ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರಾದ ಮಧುಕರ ಪಿ. ಭಾಗವತ್ ಕೆ. ಆವರು ವಾದ ವಿವಾದ ಆಲಿಸಿ ಆರೋಪಿ ಮಹಮ್ಮದ್ ನಿಝಾರ್ ತಪ್ಪಿತಸ್ಥ ಎಂದು ನಿರ್ಣಯಿಸಿ ಆತನಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಆರೋಪಿ ಜುರೈಸ್ ಕೆ.ಎಂ. ಮತ್ತು ಸುಲಿಗೆ ಮಾಡಿದ್ದ ಚಿನ್ನವನ್ನು ಸ್ವೀಕರಿಸಿದ ಬೆಳ್ಳಾರೆಯ ಜುವೆಲ್ಲರಿ ಅಂಗಡಿಯ ಮಾಲಕಿಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯವು ಬಿಡುಗಡೆ ಮಾಡಿದೆ. ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ. ಅವರು ವಾದಿಸಿದ್ದರು.